ಶಾಂತಿ ಘೋಷ್ ಅವರನ್ನು ಸಂತಿ ಘೋಷ್ (೨೨ ನವೆಂಬರ್, ೧೯೧೬ - ೧೯೮೯) ಎಂತಲೂ ಕರೆಯುತ್ತಾರೆ. ಇವರೊಬ್ಬ ಭಾರತೀಯ ರಾಷ್ಟ್ರೀಯತಾವಾದಿಯಾಗಿದ್ದರು. ತಮ್ಮ ೧೬ ನೆಯ ವಯಸ್ಸಿನಲ್ಲಿ ಸುನೀತಿ ಚೌಧರಿ ಅವರ ಜೊತೆಗೂಡಿ ಬ್ರಿಟಿಷ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನ್ನು ಹತ್ಯೆ ಮಾಡಿದರು ಹಾಗೂ ಕ್ರಾಂತಿಕಾರಿ ಹೋರಾಟದಲ್ಲಿ ಭಾಗವಹಿಸಿದರು. ಹೀಗಾಗಿ ಇವರು ಹೆಸರುವಾಸಿಯಾದರು. == ಆರಂಭಿಕ ಜೀವನ == ಶಾಂತಿ ಘೋಷ್ ಅವರು ೨೨ ನವೆಂಬರ್ ,೧೯೧೬ ರಂದು ಪಶ್ಚಿಮ ಭಾರತದ ಕೊಲ್ಕತ್ತಾದಲ್ಲಿ (ಹಿಂದೆ ಕಲ್ಕತ್ತಾ ಎಂದು ಕರೆಯಲಾಗುತ್ತಿತ್ತು) ಜನಿಸಿದರು. ಇವರು ಪೂರ್ವ ಬಂಗಾಳದ ವಿಕ್ಟೋರಿಯಾ ಕಾಲೇಜ್ ಆಫ್ ಕೊಮಿಲ್ಲಾದಲ್ಲಿ ರಾಷ್ಟ್ರೀಯವಾದಿ ಮತ್ತು ತತ್ವಶಾಸ್ತ್ರದ ಪ್ರಾಧ್ಯಾಪಕರಾದ ದೇಬೇಂದ್ರನಾಥ ಅವರ ಮಗಳು. ಇವರು ಯಾದವ ಜಾತಿಗೆ ಸೇರಿದ್ದಾರೆ. ೧೯೩೧ ರಲ್ಲಿ, ಘೋಷ್ ಅವರು ಛತ್ರಿ ಸಂಘದ (ಬಾಲಕಿ -ವಿದ್ಯಾರ್ಥಿ ಸಂಘ) ಸ್ಥಾಪಕ ಸದಸ್ಯರಾಗಿ ಮತ್ತು ಅದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಘೋಷ್ ಅವರು ನವಾಬ ಫೈಜುನ್ನೆಸಾ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಕೊಮಿಲ್ಲಾದಲ್ಲಿ ವಿದ್ಯಾರ್ಥಿನಿಯಾಗಿದ್ದ ಪ್ರೊಫುಲ್ಲನಂದಿನಿ ಬ್ರಹ್ಮ ಅವರಿಂದ ಪ್ರೇರಿತರಾಗಿ ಜುಗಂತರ ಪಕ್ಷವನ್ನು ಸೇರಿದರು. ಈ ಪಕ್ಷವು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ತೊಡೆದುಹಾಕಲು ಕೊಲೆಯನ್ನು ರಾಜಕೀಯ ತಂತ್ರವಾಗಿ ಬಳಸಿತು. ಶಾಂತಿ ಘೋಷ್ ಅವರು ಸ್ವರಕ್ಷಣೆಗಾಗಿ ಕತ್ತಿ, ದೊಣ್ಣೆ ಹಾಗೂ ಬಂದೂಕುಗಳೊಂದಿಗೆ ತರಬೇತಿ ಪಡೆದರು. == ಚಾರ್ಲ್ಸ್ ಸ್ಟೀವನ್ಸ್ ಹತ್ಯೆ == ಡಿಸೆಂಬರ್ ೧೪, ೧೯೩೧ ರ ಸಂದರ್ಭದಲ್ಲಿ ಘೋಷ್ ಮತ್ತು ಸುನೀತಿ ಚೌಧುರಿ ಇಬ್ಬರೂ ೧೬ ನೆಯ ವರ್ಷ ವಯಸ್ಸಿನವರಾಗಿದ್ದರು. ಅವರು ಕ್ರಿಸ್‌ಮಸ್‌ ಹಬ್ಬಕ್ಕೆ ಮುಂಚಿತವಾಗಿ ಮ್ಯಾಜಿಸ್ಟ್ರೇಟ್‌ಗೆ ಹೋಗಿ ಮಿಠಾಯಿ ಮತ್ತು ಚಾಕೊಲೇಟ್‌ಗಳನ್ನು ಪ್ರಸ್ತುತ ಪಡಿಸುವ ನೆಪದಲ್ಲಿ ಬ್ರಿಟಿಷ್ ಅಧಿಕಾರಿ ಮತ್ತು ಕೊಮಿಲ್ಲಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಚಾರ್ಲ್ಸ್ ಜೆಫ್ರಿ ಬಕ್‌ಲ್ಯಾಂಡ್ ಸ್ಟೀವನ್ಸ್ ಅವರ ಕಚೇರಿಗೆ ಕಾಲಿಟ್ಟರು. ಸ್ಟೀವನ್ಸ್ ಕ್ಯಾಂಡಿಯನ್ನು ತಿಂದು "ಇವು ರುಚಿಕರವಾಗಿವೆ!" ಎಂದು ಹೇಳಿದಾಗ, ಘೋಷ್ ಮತ್ತು ಚೌಧರಿ ತಮ್ಮ ಶಾಲುಗಳ ಕೆಳಗೆ ಬಚ್ಚಿಟ್ಟಿದ್ದ ಸ್ವಯಂಚಾಲಿತ ಬಂದೂಕುಗಳನ್ನು ತೆಗೆದು "ಇದು ಹೇಗಿದೆ ಮಿಸ್ಟರ್ ಮ್ಯಾಜಿಸ್ಟ್ರೇಟ್?" ಎನ್ನುತ್ತಾ ಅವನನ್ನು ಗುಂಡಿಕ್ಕಿ ಕೊಂದರು. === ವಿಚಾರಣೆ ಮತ್ತು ಶಿಕ್ಷೆ === ಹುಡುಗಿಯರನ್ನು ಬಂಧಿಸಿ ಸ್ಥಳೀಯ ಬ್ರಿಟಿಷ್ ಜೈಲಿನಲ್ಲಿ ಇಡಲಾಯಿತು. ಫೆಬ್ರವರಿ ೧೯೩೨ ರಲ್ಲಿ ಘೋಷ್ ಮತ್ತು ಚೌಧರಿ ಅವರು ಕೋಲ್ಕತ್ತಾದ ನ್ಯಾಯಾಲಯದಲ್ಲಿ ಕಾಣಿಸಿಕೊಂಡರು .ಅವರಿಗೆ ಜೀವಾವಧಿ ಗಡಿಪಾರು ಶಿಕ್ಷೆಯನ್ನು ವಿಧಿಸಲಾಯಿತು (ಜೀವಮಾನದ ಗಡಿಪಾರು). ಸಂದರ್ಶನವೊಂದರಲ್ಲಿ ಅವರು "ಕುದುರೆ ಲಾಯದಲ್ಲಿ ಬದುಕುವುದಕ್ಕಿಂತ ಸಾಯುವುದು ಉತ್ತಮ" ಎಂದು ಹೇಳಿದ್ದಾರೆ. ಘೋಷ್ ಅವರು ತಮಗೆ ವಿಧಿಸಿದ ಶಿಕ್ಷೆಯಿಂದ ನಿರಾಶೆಗೊಂಡು ಈ ಶಿಕ್ಷೆಯಿಂದ ಹುತಾತ್ಮರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಘೋಸ ಅವರಿಗೆ ಜೈಲಿನಲ್ಲಿ ಅವಮಾನ ಮಾಡಿ ಅವರನ್ನು ದೈಹಿಕ ಹಿಂಸೆಗೆ ಒಳಪಡಿಸಲಾಯಿತು ಹಾಗೂ ಅವರನ್ನು "ದ್ವಿತೀಯ ದರ್ಜೆಯ ಕೈದಿ" ಎಂದು ಪರಿಗಣಿಸಲಾಯಿತು. ಸುಮಾರು ಏಳು ವರ್ಷಗಳ ನಂತರ ೧೯೩೯ ರಲ್ಲಿ ಗಾಂಧಿ ಮತ್ತು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ನಡುವಿನ ಮಾತುಕತೆಗಳಿಂದಾಗಿ ಕ್ಷಮಾದಾನ ಮಾಡಿ ಅವರನ್ನು ಬಿಡುಗಡೆ ಮಾಡಲಾಯಿತು. === ಸಾರ್ವಜನಿಕ ಮತ್ತು ಮಾಧ್ಯಮ ಪ್ರತಿಕ್ರಿಯೆ === ಸಮಕಾಲೀನ ಪಾಶ್ಚಿಮಾತ್ಯ ನಿಯತಕಾಲಿಕಗಳು ಈ ಹತ್ಯೆಯನ್ನು " ಅರ್ಲ್ ಆಫ್ ವಿಲ್ಲಿಂಗ್‌ಡನ್‌"ನ ಸುಗ್ರೀವಾಜ್ಞೆಯ ವಿರುದ್ಧ ಭಾರತೀಯರ ಆಕ್ರೋಶದ ಸಂಕೇತವಾಗಿ ಚಿತ್ರಿಸಿದವು ಹಾಗೂ ಅದು ಭಾರತೀಯರ ನಾಗರಿಕ ಹಕ್ಕುಗಳನ್ನು , ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿತು. ಭಾರತೀಯ ಮೂಲಗಳು ಘೋಷ್ ಮತ್ತು ಚೌಧರಿಯವರು "ಬ್ರಿಟಿಷ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳ ದುರ್ವರ್ತನೆಗಳಿಗೆ ಪ್ರತಿಕ್ರಿಯೆಯಾಗಿ ಹತ್ಯೆ ಮಾಡಿದರು, ಅವರು ತಮ್ಮ ಅಧಿಕಾರದ ಸ್ಥಾನಗಳಲ್ಲಿ ಸುರಕ್ಷಿತವಾಗಿದ್ದು, ಕೆಲವೊಮ್ಮೆ ಭಾರತೀಯ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರು" ಎಂದು ಹೇಳುತ್ತವೆ. ತೀರ್ಪನ್ನು ಘೋಷಿಸಿದ ನಂತರ, ಘೋಷ್ ಮತ್ತು ಚೌಧರಿಯನ್ನು ರಾಷ್ಟ್ರೀಯವಾದಿ ನಾಯಕಿಯರು ಎಂದು ಹೊಗಳಿದವರನ್ನು ರಾಜ್ಯಶಾಹಿ ಜಿಲ್ಲೆಯ ಪೊಲೀಸ್ ಗುಪ್ತಚರ ವಿಭಾಗವು ಕಂಡುಹಿಡಿಯಿತು. == ನಂತರದ ಜೀವನ ಮತ್ತು ಸಾವು == ಜೈಲಿನಿಂದ ಬಿಡುಗಡೆಯಾದ ನಂತರ ಘೋಷ್ ಅವರು ಬಂಗಾಳದ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು ಮತ್ತು ಭಾರತದ ಕಮ್ಯುನಿಸ್ಟ್ ಚಳವಳಿಯಲ್ಲಿ ಭಾಗವಹಿಸಿದರು. ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ೧೯೪೨ ರಲ್ಲಿ, ಘೋಷ್ ಅವರು ಅಧ್ಯಾಪಕರಾದ ಚಿತ್ತರಂಜನ ದಾಸ ಅವರನ್ನು ವಿವಾಹವಾದರು. ಅವರು ೧೯೫೨-೬೨ ಮತ್ತು ೧೯೬೭-೬೮ ರಿಂದ ಪಶ್ಚಿಮ ಬಂಗಾಳದ ಲೆಜಿಸ್ಲೇಟಿವ್ ಕೌನ್ಸಿಲ್‌ ಹಾಗೂ ೧೯೬೨-೬೪ ರವರೆಗೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸೇವೆ ಸಲ್ಲಿಸಿದರು. ಘೋಷ್ ಅವರು "ಅರುಣ ಬಹ್ನಿ "ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದರು. ಘೋಷ್ ಅವರು ೧೯೮೯ ರಲ್ಲಿ ನಿಧನರಾದರು. == ಉಲ್ಲೇಖಗಳು ==